ಯೇಗ್ದಾಗೆಲ್ಲಾ ಐತೆ – ಬೆಳಗೆರೆ ಕೃಷ್ಣಶಾಸ್ತ್ರಿಗಳು

ಇದು ಪುಸ್ತಕ ವಿಮರ್ಶೆ ಅಲ್ಲ. ಇದು ನನ್ನ ಓದಿನ ಅನುಭವ/ಅನಿಸಿಕೆ.
ಪುಸ್ತಕವನ್ನು ಬರೆದವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಇವರ ಜೀವನ ಚರಿತ್ರೆ ಬಗ್ಗೆ ಗೊತ್ತಿಲ್ಲ ಆದರೆ ನನಗೆ ತಿಳಿದದ್ದು ಇವರು ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ, ಶಿಕ್ಷಕರು ಮತ್ತು ಯಾವಾಗಲೂ ಬಿಳಿಯ ಬಟ್ಟೆಗಳನ್ನು ತೋಡುತ್ತಿದ್ದರು.
ಇನ್ನು ಈ ಪುಸ್ತಕದ ಬಗ್ಗೆ ತುಂಬಾ ಕೇಳಿದ್ದೆ, ನೋಡಿದ್ದೆ ಆದರೆ ಓದಬೇಕೆಂದುಕೊಂಡಿರಲಿಲ್ಲ. ಬಹುಶಃ ಎರಡು ಕಾರಣಗಳಿರಬಹುದು: ೧. ಪುಸ್ತಕದ ಹೆಸರಿನ ಅರ್ಥ ಗೊತ್ತಿರಲಿಲ್ಲ. ೨. ಪುಸ್ತಕದ ಮುಖಪುಟ ನೋಡಿ ಇದು ಯಾವುದೋ ಮಠದ ಸ್ವಾಮಿಜಿಗಳ ಬಗ್ಗೆ ಹೋಗಳಿ ಬರೆದಿರಬಹುದು ಅಂತ ಅನ್ಕೊಂಡಿದ್ದೆ. ಒಮ್ಮೆ ಫೇಸ್‌ಬುಕ್‌ ನಲ್ಲಿ ಒಬ್ಬರು ಈ ಪುಸ್ತಕದ ವಿಮರ್ಶೆ ಬರೆದ್ದು ನೋಡಿದೆ. ಅಲ್ಲದೆ ವಿಮರ್ಶೆಗೆ ಬಂದ ಕಮೆಂಟುಗಳನ್ನು ಓದಿದೆ. ಬಹಳಷ್ಟು ಜನ ನಾಲ್ಕು ಸಾರಿ ಓದಿದ್ದಿನಿ, ಎಂಟು ಸಾರಿ ಓದಿದ್ದಿನಿ, ಸಮಯ ಸಿಕ್ಕಾಗಲೆಲ್ಲ ಓದುತ್ತಲೇ ಇರುತ್ತೆನೆ, ಇನ್ನು ಎಷ್ಟು ಸಾರಿ ಬೇಕಾದರೂ ಓದಬಹುದು ಅಂತೆಲ್ಲಾ ಬರೆದಿದ್ದರು. ಅದನ್ನು ಓದಿ ನನಗೂ ಓದಲೇಬೇಕೆನಿಸಿತು. ಓದುವ ತುಮುಲ ಇನ್ನೂ ಹೆಚ್ಚಾಯಿತು. ಪುಸ್ತಕವನ್ನು ಕೊಂಡುಕೊಂಡುಬಿಟ್ಟೆ. ಓದಲೂ ಕೈಗೆತ್ತಿದ್ದು ಆಯಿತು.
ಲೇಖಕರ ಮುನ್ನುಡಿ ಓದಿದ ಮೇಲೆ ಅರ್ಥವಾಗಿದ್ದು “ಯೇಗ್ದಾಗೆಲ್ಲಾ ಐತೆ” ಅಂದರೆ ” ಯೋಗದಲ್ಲಿ ಎಲ್ಲವೂ ಇದೆ”. ಇದು ಮುಕುಂದೂರು ಸ್ವಾಮಿಗಳನ್ನು ಕುರಿತು ಲೇಖಕರು ತಮ್ಮ ಒಡನಾಟ, ಮಾತುಕತೆ, ಹರಟೆ, ನಗು, ಪ್ರಯಾಣ ಮುಂತಾದವುಗಳ ನೆನಪುಗಳನ್ನು ಸುಂದರವಾಗಿ ಹೆಣೆದಿರುವ ಅದ್ಭುತ ಪುಸ್ತಕ. ಎಷ್ಟೊಂದು ಸುಂದರವಾಗಿ ಬರೆದಿದ್ದಾರೆ ಅಂದರೆ, ಇವರಿಬ್ಬರ ಜೋತೆ ನಾವೂ (ಓದುಗ) ಮೂರನೆಯ ವ್ಯಕಿಯಾಗಿ ಅವರ ಜೋತೆಗೆ ಇದ್ದೆವೆನೋ ಅಂತ ಅನ್ನಿಸುವುದು. ಅಂತಹ ಅದ್ಭುತ ಅನುಭವ ನೀಡುವುದು. ಲೇಖಕರು ನಮ್ಮನ್ನು ೬೦ ವರ್ಷಗಳ ಹಿಂದೆ ಕರೆದುಕೊಂಡು ಹೋಗುತ್ತಾರೆ. ಅಂದಿನ ಜನ ಜೀವನ, ಹಾವ ಭಾವ, ಊಟ, ವಸತಿ, ವ್ಯವಸಾಯ, ಹಳ್ಳಿ ಜೀವನ, ಪ್ರಕೃತಿ ಸೌಂದರ್ಯ ಎಲ್ಲವನ್ನೂ ಕಣ್ಣ ಮುಂದೆ ಕಟ್ಟಿದಂತೆ ಬರೆದಿದ್ದಾರೆ. ಇವತ್ತಿನ ಅವಸರದ ಮೆಕ್ಯಾನಿಕಲ್ ಲೈಫ್ ಬಿಟ್ಟು ೬೦ ವರ್ಷ ಹಿಂದಕ್ಕೆ ಹೋಗಬೇಕೆನಿಸುವಷ್ಟು ಇಷ್ಟವಾಗುತ್ತೆ.
ಮುಕುಂದೂರು ಸ್ವಾಮಿಗಳು ನನಗೆ ತುಂಬಾ ಅದ್ಭುತ ವ್ಯಕ್ತಿಗಳು ಅನ್ನಿಸಿದರು. ಇವತ್ತಿನ ಸ್ವಾಮಿಜಿಗಳಿಗೂ ಅವರಿಗೂ ಸಾವಿರ ಪಟ್ಟು ವ್ಯತ್ಯಾಸ ಉಂಟು. ಇವತ್ತಿನ ಸ್ವಾಮಿಗಳ ಮುಂದೆ ಮುಕುಂದೂರು ಸ್ವಾಮಿಗಳು ದೇವರಂತೆ ಕಂಡರು. ಅವರದು ಅಲೆಮಾರಿ ಜೀವನ, ಪ್ರತಿಯೊಬ್ಬ ಮನುಷ್ಯನನ್ನೂ ಕರೆದು ಮಾತನಾಡಿಸುತ್ತದ್ದರು, ಪ್ರತಿಯೊಂದು ಮರ ಗಿಡ ಕಲ್ಲು ಮಣ್ಣು ಹೂವು ಗಾಳಿ ನೀರು ಪ್ರಾಣಿ ಪಕ್ಷಿಗಳು ಹೀಗೆ ಎಲ್ಲದರ ಜೋತೆಗೂ ಮಾತನಾಡುತ್ತಿದ್ದರು. ಇಂತಹ ಸ್ವಾಮಿಗಳು ಎಲ್ಲಿ ಸಿಗುತ್ತಾರೆ ಹೇಳಿ. ಅವರ ಎಲ್ಲಾ ಮಾತುಗಳು ತಿಳಿಹಾಸ್ಯದಿದಂದಲೇ ಕೂಡಿರುತ್ತಿದ್ದು ಪ್ರತಿ ಮಾತಿನಲ್ಲಿ ಒಂದು ಅದ್ಭುತ ಜೀವನದ ಪಾಠವನ್ನು ಹೇಳಿಕೊಡುತ್ತಿದ್ದರು. ಅವರು ಹೇಳುವ ಪಾಠಗಳು ಅನಕ್ಷರಸ್ಥರಿಗೂ ಅರ್ಥವಾಗುವಂತೆ ಹೇಳುವ ರೀತಿ ಮಾತ್ರ ಬೆರುಗು ಹುಟ್ಟಿಸುವಂತದ್ದು. ಈ ಕೆಳಗಿನ ಸಾಲುಗಳನ್ನು ನೋಡಿ:
ಒಮ್ಮೆ ಮಾತಿನ ಮಧ್ಯೆ ಸ್ವಾಮಿಗಳು ಹೀಗೆಂದರು: “ಸಾವ್ಕಾರಂತಾವ ದುಡ್ಡಿರೋದು ಸನ್ಯಾಸಿತಾವ ಸಿದ್ಧಿ ಇರೋದು ಎಳ್ಡು ಒಂದೇ ಕಣೋ ಮಗ. ಅವ್ನಿಗೂ ಹಾಂಕಾರ ಬಿಟ್ಟಿಲ್ಲ ಇವ್ನಿಗೂ ಬಿಟ್ಟಿಲ್ಲ… ಏಸು ಖರ್ಚಾದವಲೇ ನಿನ್ನ ಮನೆತನ ನಿರ್ನಾಮ ಮಾಡ್ತಿನಿ ಅಂತಾನೆ ಸಾವ್ಕಾರ. ಒಂದು ಬಿರುಗಣ್ಣು ಬಿಟ್ಟು ನಿನ್ನ ಸುಟ್ಟು ಬಿಡ್ತೀನಿ ಅಂತಾನೆ ಸನ್ಯಾಸಿ. ಇಬ್ರಿಗೂ ಗರಾ (ಅಹಂಕಾರ) ಬಿಟ್ಟಿಲ್ಲ. ಗರಾ ಬಿಟ್ರೇನೆ ಗುರು ನೋಡಪ್ಪ”.
ಇನ್ನು ಸ್ವಾಮಿಗಳು ಪ್ರಕೃತಿಯ ಸೊಬಗನ್ನು ಹೇಗೆ ಆಸ್ವಾದಿಸುತ್ತಿದ್ದರೆಂದರೆ ಸ್ವತಃ ಬೆಳೆಗೆರೆ ಶಾಸ್ತ್ರೀಯವರು ಬೇರಗಾಗಿದ್ದಾರೆ. ಓದುಗ ಇವರಿಬ್ಬರ ಜೊತೆಗೆ ಮೂರನೆಯವನಾಗಿಬಿಡುತ್ತಾನೆ. ಈ ಕೆಳಗಿನ‌ ಇನ್ನೊಂದು ಸಾಲುಗಳು ಹೀಗಿವೆ:
” ಅಲಲಲಾಲ, ಅದು ನೋಡಪ್ಪಾ ಏನ್ ಸೊಗಸು! ಅಲ್ನೋಡು ಅವ್ನು ಎಂಥ ಬಣ್ಣ ಹಾಕ್ಕೊಂಡವ್ನೆ! ಎಲೆಲೇ, ಇವ್ನು ನೋಡಪ್ಪಾ ಆನೆ ಮುಖಾ! ಆಗೋ, ಅಲ್ನೋಡು ಇವನೆಲ್ಲೋ ಅರ್ಜೆಂಟಾಗಿ ಹೊಂಟವ್ನೆ! ಇಗೋ ಕುದುರೆ ಓಟ ಓಡುತ್ತ! (ನಗುತ್ತ ಆ ಮೋಡಗಳ ಬಣ್ಣ ಆಕಾರಗಳನ್ನು ವಿವರಿಸುತ್ತ) ಅಗೋ ಆ ಆನೆ ಮುಖದೋನು, ಆ ಕುದುರೆ! ಅವೆಲ್ಲೋದ್ವಪ್ಪಾ! ಇಂಗೇ ನೋಡು ಈಗ ಇದ್ದಿದ್ದು ಇನ್ನೊಂದು ಗಳಿಗಿಲ್ಲ. ಇಂಗೇ ಅಲ್ವೇ ಲೋಕ! ಇಂಥಾದ್ರಾಗೆ ನಾನೇ ಧೀರ. ನಂದೆ ಕೋಡು ಅಂತಾನೇ ಈ ಬಡ್ಡೀ ಮಗ”.
ಪುಸ್ತಕದ ತುಂಬೆಲ್ಲಾ ಇಂತಹ ಅದ್ಭುತ ಸಾಲುಗಳೇ ತುಂಬಿವೆ. ನಿಜಕ್ಕೂ ಅತ್ಯುತ್ತಮ ಪುಸ್ತಕ. ನೀವೂ ಒಮ್ಮೆ ಓದಿ. ಶುಭವಾಗಲಿ.

4 thoughts on “ಯೇಗ್ದಾಗೆಲ್ಲಾ ಐತೆ – ಬೆಳಗೆರೆ ಕೃಷ್ಣಶಾಸ್ತ್ರಿಗಳು

ನಿಮ್ಮ ಟಿಪ್ಪಣಿ ಬರೆಯಿರಿ