ವಸುಧೇಂದ್ರ ಅವರಿಗೆ ಒಂದು ಪತ್ರ

ನಾನು ವಸುಧೇಂದ್ರ ಅವರಿಗೆ ಬರೆದ ಪತ್ರ:
————————————
ಪ್ರೀತಿಯ ವಸುಧೇಂದ್ರ ಸರ್,

ಈ ಪತ್ರ ಬರೆದ ಕಾರಣ, ನಾನು ನಿಮ್ಮ ಪ್ರಬಂಧ ಸಂಕಲನಗಳಾದ “ನಮ್ಮಮ್ಮ ಅಂದ್ರೆ ನಗೀಷ್ಟ” ಮತ್ತು “ವರ್ಣಮಯ” ಪುಸ್ತಕಗಳನ್ನು ಕೊಂಡುತಂದು ಓದಿದೆ. ಅದಕ್ಕಾಗಿ ನನ್ನ ಅನಿಸಿಕೆಗಳನ್ನು ಲೇಖಕರಿಗೆ ತಿಳಿಸಬೇಕೆಂಬ ಒತ್ತಡ ನನ್ನೊಳಗೆ ಜಾಸ್ತಿಯಾಯಿತು. ಅದರ ಫಲಿತಾಂಶವೇ ಈ ಪತ್ರ.

ಮೊದಲಿಗೆ ನನ್ನ ಬಗ್ಗೆ ಸ್ವಲ್ಪ ತಿಳಿಸಲು ಬಯಸುತ್ತೇನೆ. ನಾನೂ ನಿಮ್ಮ ಹಾಗೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಒಂದು ಎಂಎನ್ಸೀ ಕಂಪನಿಯಲ್ಲಿ ಐದು ವರ್ಷಗಳಿಂದ ದುಡಿಯುತ್ತಿದ್ದೇನೆ. ನಾನು ಹತ್ತನೇ ತರಗತಿಯವರೆಗೂ ಓದಿದ್ದು ಕನ್ನಡದಲ್ಲಿ. ಚಿಕ್ಕಂದಿನಿಂದಲೇ ಪುಸ್ತಕ ಓದುವ ಹುಚ್ಚು. ನನ್ನ ಊರು ಬಾಗಲಕೋಟೆಯ ಜಮಖಂಡಿ ತಾಲೂಕಿನ ಆಲಗೂರು. ರಜಾ ದಿನಗಳಲ್ಲಿ ಬರೀ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದಿಕೊಂಡು ಇರುತ್ತಿದ್ದೆ. ನಮ್ಮಮ್ಮ “ಮಗ ಇನ್ನೂ ಊಟಕ್ಕೆ ಯಾಕೆ ಬಂದಿಲ್ಲ?” ಅಂತ ಓಣಿ ಓಣಿ ಹುಡುಕುತ್ತಿದ್ದರು. ಕೊನೆಗೆ ಯಾರೋ ಒಬ್ಬರು ಬಂದು “ಏಯ ಹುಡುಗ ನಿಮ್ಮ ಅವ್ವ ನಿನ್ನ್ ಹುಡುಕಾಡಲಿಕ್ಕೆ ಹತ್ಯಾರು, ನೀ ಇಲ್ಲಿ ಕುಂತಿ, ಹೋಗ್ ಮನೀಗೆ..” ಅಂತ ಹೇಳಿದಾಗಲೇ ತಡಬಡಿಸಿ ಎದ್ದು ಮನೆಗೆ ಓಡುತ್ತಿದ್ದೆ. ನಂತರ ಕಾಲೇಜು ದಿನಗಳಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಅಭ್ಯಾಸ ಮಾಡದೆ ಕವಿತೆಗಳನ್ನು ಬರೀತಿದ್ದೆ. ಒಂದೊಂದು ದಿನ ಬರೀತಾ ಬರೀತಾ ಕಾಲೇಜ್ ಹೋಗುವುದನ್ನೇ ಮರೆತು ಬಿಡುತ್ತಿದ್ದೆ.

ಆವಾಗ ತಾನೇ “ವಿಜಯ ಕರ್ನಾಟಕ” ಪತ್ರಿಕೆ ಪ್ರಾರಂಭವಾಗಿತ್ತು ಮತ್ತು ಜನಪ್ರಿಯವಾಗುತ್ತಿತ್ತು. ರವಿವಾರ ಬರುವ ಸಾಪ್ತಾಹಿಕ ಪುರವಣಿ ನನ್ನ ಅಚ್ಚುಮೆಚ್ಚಿನದಾಗಿತ್ತು. ಅದರಲ್ಲಿ ಬರುತ್ತಿದ್ದ ಕಥೆ, ಕವಿತೆ, ಪ್ರಬಂಧ, ಅಂಕಣಗಳನ್ನು ಬಿಟ್ಟು ಬಿಡದೆ ಓದುತ್ತಿದ್ದೆ. ಆವಾಗಿನ ದಿನಗಳಲ್ಲೇ ನಾನು ನಿಮ್ಮ ಕಥೆಗಳು “ಯುಗಾದಿ” ಮತ್ತು “ಮಿಥುನ” ಓದಿದ್ದು. ಹಾಗೆಯೇ ವಿವೇಕ್ ಶಾನಭಾಗ, ಜಯಂತ ಕಾಯ್ಕಿಣಿ, ಮೊಗಳ್ಳಿ ಗಣೇಶ, ಗುರುಪ್ರಸಾದ ಕಾಗಿನೆಲೆ, ರಘುನಾಥ ಚ ಹ, ಚಿಂತಾಮಣಿ ಕೊಡ್ಲೇಗೆರೆ, ಸುಮಂಗಲಾ, ಸುನಂದಾ ಕಡಮೆ, ನಾಗರಾಜ ವಸ್ತಾರೆ ಹಾಗೂ ಹಿರಿಯಲೇಖಕರಾದ ಎಸ್ ದಿವಾಕರ್, ಶಾಂತಿನಾಥ ಕುರ್ತಕೋಟಿ, ಜಿ ಎಸ್ ಆಮೂರ್ ಇನ್ನೂ ಮುಂತಾದವರ ಲೇಖನಗಳನ್ನು ಓದುತ್ತಿದ್ದೆ. ನಂತರ ನಾನು MCA ಸೀಟು ಸಿಕ್ಕಮೇಲೆ ಪಠ್ಯ ಪುಸ್ತಕಗಳ ಮೇಲೆ ನನ್ನ ಓದು ವಾಲಿಕೊಂಡಿತು. ಸಾಹಿತ್ಯದ ಸ್ಪರ್ಶ ನನಗೆ ಗೊತ್ತಿಲ್ಲದೆ ದೂರವಾಗತೊಡಗಿತು. MCA ಕೊನೆಯ ಸೆಮೀಸ್ಟೇರ್ನಲ್ಲಿದ್ದಾಗಲೇ ನನಗೆ ನೌಕರಿ ಸಿಕ್ಕಿಬಿಟ್ಟಿತು. ನಂತರ ಈ so called IT world/Corporate world ಬಗ್ಗೆ ನಿಮಗೆ ಹೇಳುವುದೇನೂ ಇಲ್ಲ. ನನ್ನ ಸಾಹಿತ್ಯದ ಓದು ಸಂಪೂರ್ಣವಾಗಿ ನಿಂತೆ ಹೋಯಿತು. ಯಾವಾಗಲಾದರೊಮ್ಮೆ ಇಂಗ್ಲೀಷ ಪುಸ್ತಕಗಳನ್ನು ಓದುತ್ತಿದ್ದೆ. ಅದೂ ಮ್ಯಾನೇಜ್ಮೆಂಟ್, ತಂತ್ರಜ್ಞಾನ ಸಂಬಂಧಿಸಿದ ಪುಸ್ತಕಗಳು. ಅದು ಬಿಟ್ಟರೆ ಬರೀ ಇಂಟರ್‌ನೆಟ್, ಟೀವೀ ಇಲ್ಲವೇ ಸಿನಿಮಾ ಅಂತ ೫ ವರ್ಷಗಳು ಕಳೆದು ಹೋದವು.

ಒಮ್ಮೆ ನನಗೆ ಇಂಟೆರ್ನೆಟ್ಟಿನಲ್ಲಿ ಚುಕ್ಕುಬುಕ್ಕು ಡಾಟ್ ಕಾಮ್ ತಾಣದ ಪರಿಚಯವಾಯಿತು. ಅದರ ಚಂದವಾದ ಅಲಂಕಾರ, ಅತ್ತ್ಯುತ್ತಮ ಗುಣಮಟ್ಟದ ಲೇಖನಗಳು ನನ್ನನ್ನು ಮೂಖಸ್ಮಿತನಾಗಿಸಿ ಬಿಟ್ಟವು. ಇಂತಹ ಜಾಲತಾಣ ಕನ್ನಡದಲ್ಲೂ ಇರಲು ಸಾಧ್ಯವೇ ಎನ್ನಿಸಿಬಿಟ್ಟಿತು. ತುಂಬಾ ಪ್ರಭಾವಿತನಾದೆ. ನಂತರ ಅದರಲ್ಲಿಯ ಎಲ್ಲ ಲೇಖನಗಳನ್ನು ಜಾಲಾಡಿದೆ. ಅದರಲ್ಲಿ ನಾನು ಶಾಲೆಯಲ್ಲಿದ್ದಾಗ ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ಓದಿಕೊಂಡಿದ್ದ ಎಲ್ಲ ಬರಹಗಾರರು ಸಿಕ್ಕಿಬಿದ್ದರು!!! ತುಂಬಾ ಆಶ್ಚರ್ಯವಾಯಿತು ಮತ್ತು ಅಷ್ಟೇ ಸಂತೋಷವಾಯಿತು. ಜೊತೆಗೆ ಹಿರಿಯ ಸಾಹಿತಿಗಳು ಸಿಕ್ಕರು. ಈ ಚುಕ್ಕುಬುಕ್ಕು ತಾಣದಿಂದ ನನ್ನ ಹಳೆಯ ಸಿಹಿ ಕಲ್ಲುಸಕ್ಕರೆಯ ದಿನಗಳನ್ನು ಮರಳಿ ಪಡೆಯುವಂತಾಯಿತು. ನಂತರ ದಿನಾಲೂ ೪-೫ ಸಲ ತಾಣಕ್ಕೆ ಭೆಟ್ಟಿ ನೀಡುತ್ತಿದ್ದೆ. ಆದರೆ ತುಂಬಾ ವಿಷಾದವೆಂದರೆ ಚುಕ್ಕುಬುಕ್ಕು ತಾಣ ೨ ತಿಂಗಳಿಂದ ನಿಂತುಹೋಗಿದೆ. ಈ ತಾಣ ನನಗೆ ಸಾಹಿತ್ಯದ ಒಂದು ಪಕ್ಷಿನೋಟವನ್ನುತೋರಿಸಿತು. ಯಾರ್ಯಾರು ಬರೀತಾರೆ, ಏನೇನು ಬರೀತಾರೆ, ಎಲ್ಲೆಲ್ಲಿ ಇರ್ತಾರೆ, ಇಲ್ಲಿಯವರೆಗೂ ಯಾವ ಯಾವ ಪುಸ್ತಕಗಳನ್ನು ಬರೆದಿದ್ದಾರೆ, ಯಾರ ಪುಸ್ತಕ ಯಾವ ಪ್ರಕಾಶಕರು ಪ್ರಕಾಶಿಸಿದರು, ಅದು ಎಲ್ಲಿ ಹೇಗೆ ಲಭ್ಯವಿರುತ್ತದೆ, ಯಾರು ಪುಸ್ತಕದ ಮುಖಪುಟ ವಿನ್ಯಾಸ ಮಾಡಿದರು, ಕರ್ನಾಟಕದಲ್ಲಿ ಯಾವ ಯಾವ ಮುಖ್ಯ ಪುಸ್ತಕದ ಅಂಗಡಿಗಳು ಇವೆ. ಎಲ್ಲವೂ ಈ ತಾಣದಿಂದ ತಿಳಿದುಕೊಂಡೆ. ನಂತರ ಬರಿ ಇಂಟರ್‌ನೆಟ್ ನಲ್ಲಿ ಓದಿಕೊಂಡಿದ್ದ ನಾನು ಪುಸ್ತಕಗಳನ್ನು ಕೊಂಡು ಓದಲು ಶುರು ಮಾಡಿದೆ. ಕನ್ನಡ ಭಾಷೆಯಮೇಲೆ ಹಿಡಿತ ಸಾಧಿಸಲು ಕನ್ನಡ ಶಬ್ದಕೋಶ ಓದಲು ಶುರು ಮಾಡಿದೆ. ಚಂದ್ರಶೇಖರ ಕಂಬಾರ, ಅನಂತ ಮೂರ್ತಿ, ಎಸ್ ದಿವಾಕರ್, ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ, ವಸುಧೇಂದ್ರ, ಜೋಗಿ, ಶಾಂತಿನಾಥ ದೇಸಾಯಿ, ಪೂರ್ಣಚಂದ್ರ ತೇಜಸ್ವಿ, ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಪುಸ್ತಕಗಳನ್ನು ಕೊಂಡುಕೊಂಡೆ.

ಇತ್ತೀಚಿಗೆ ನಿಮ್ಮ “ನಮ್ಮಮ್ಮ ಅಂದ್ರೆ ನನಗಿಷ್ಟ” ಮತ್ತು “ವರ್ಣಮಯ” ಪುಸ್ತಕಗಳನ್ನು ಓದಿದೆ. ಒಮ್ಮೆ ಓದಲು ಶುರು ಮಾಡಿದರೆ ಸರಾಗವಾಗಿ ಓದಿಸಿಕೊಂಡು ಬಿಡುತ್ತವೆ. ನಿಮ್ಮಷ್ಟು ಸರಳ ಸುಂದರ ಬರವಣಿಗೆ ನಾನು ಎಲ್ಲೂ ಓದಿಲ್ಲ. ಬರೀ ೫ ನೇ ತರಗತಿ ಓದಿದ ವ್ಯಕ್ತಿ ಕೂಡ ನಿಮ್ಮ ಪುಸ್ತಕವನ್ನು ಓದಿ ಅರ್ಥೈಸಿಕೊಳ್ಳಬಲ್ಲ. ಅದು ನಿಮ್ಮ ಬರವಣಿಗೆಯ ತಾಕತ್ತು ಅಂತ ಹೇಳಬಯಸುತ್ತೇನೆ. ಮತ್ತು ನಿಮ್ಮ ಪುಸ್ತಕಗಳು ಮರು ಮುದ್ರಣ ಕಾಣುವ ಕಾರಣವೂ ಅಂತ ಹೇಳಬಯಸುತ್ತೇನೆ. ನಿಮ್ಮ ಪುಸ್ತಕದ ಮುಖಪುಟ ವಿನ್ಯಾಸವು ಸಹ ಕಾರಣವಾಗಿದೆ.

“ನಮ್ಮಮ್ಮ ಅಂದ್ರೆ ನನಗಿಷ್ಟ” ಪುಸ್ತಕದಲ್ಲಿ ನನಗೆ ಅತಿ ಇಷ್ಟವಾದ ಪ್ರಬಂಧಗಳು ಎಂದರೆ : “ನಮ್ಮಮ್ಮ ಅಂದ್ರೆ ನನಗಿಷ್ಟ”, “ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು”, “ನಮ್ಮೂರಿಗೂ ಅಣ್ಣಾವ್ರು ಬಂದಿದ್ರು” ಮತ್ತು “ಹಾಡು ಹೆಣೆದ ನೆನಪು”. ಮೊದಲು “ನಮ್ಮಮ್ಮ ಅಂದ್ರೆ ನನಗಿಷ್ಟ” ಓದಲು ಶುರು ಮಾಡಿದೆ. ಆಗ ನಾನು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಚೆಡ್ಡಿ ರಾಸ್ಕಲ್ ಅಂತ ಓದಿದ್ದೆ ತಡ ನಗಲು ಶುರು ಮಾಡಿದೆ. ಪಕ್ಕದಲ್ಲಿದ್ದ ಆಸಾಮಿ ನನ್ನನ್ನೇ ನೋಡತೊಡಗಿದ. ನಾನು ಮತ್ತೆ ಮತ್ತೆ ನಗಲು ಶುರು ಮಾಡಿದೆ. ಪಕ್ಕದ ಆಸಾಮಿ ನೋಡಿ ನುಮ್ಮನಾದ. ನಾನು ಇದೊಂದು ಹಾಸ್ಯ ಪ್ರಬಂಧ ಅಂತ ತಿಳಕೊಂಡು ಓಡತೊಡಗಿದೆ. ನಂತರ ಹಾಗೆ ಓದಿಕೊಂಡು ಹೋದಂತೆ ನನ್ನ ನಗು ಮಾಯವಾಯಿತು. ಮನಸ್ಸು ಗಂಭೀರವಾಯಿತು. ಹೃದಯ ಭರವಾಗತೊಡಗಿತು. ಗಂಟಲು ಬಿಗಿಯಾಯಿತು. ಕಣ್ಣುಗಳು ಗೊತ್ತಿಲ್ಲದೆ ತೇವಗೊಂಡಿದ್ದವು. ನನ್ನ ಪಕ್ಕದಲ್ಲಿದ್ದ ಆಸಾಮಿ ಕಡೆಗೆ ಒಮ್ಮೆ ನೋಡಿದೆ, ಅವನು ಕಣ್ಣು ಪಿಳಿ ಪಿಳಿ ಮಾಡಿ ನನ್ನನ್ನೇ ನೋಡುತ್ತಿದ್ದ. ಕೇಳಿಯೇ ಬಿಟ್ಟ “ಯಾಕೆ ಸರ್ ನಗುತ್ತಿದ್ದವರು ಒಮ್ಮೆಗೇ ಅಳಲು ಶುರು ಮಾಡಿದಿರಿ?” ನಾನು ಪುಸ್ತಕದ ಕಡೆಗೆ ಬೆರಳು ತೋರಿಸಿ ಸುಮ್ಮನಾದೆ. ಅವನು ಸುಮ್ಮನಾದ. ಅಮ್ಮನ ಬೆಲೆ ಏನು ಎಂಬುವುದನ್ನು ತಿಳಿದುಕೊಳ್ಳಲು ಈ ಪ್ರಬಂಧ ಓದಿದರೆ ಸಾಕು. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಅತ್ಯದ್ಭುತ!!! ಅಮ್ಮ ಸಾವಿರ ಸಲ ಮಗುವಿನ ಹೊಲಸು ತೆಗೆದು ತೊಳೆಯುತ್ತಾಳೆ ಆದರೆ ಅವಳ ಮುಪ್ಪಿನ ಕಾಲಕ್ಕೆ ಮಕ್ಕಳಾದ ನಾವು ಎಷ್ಟು ಜನ ಅಮ್ಮನಿಗೆ ಅಮ್ಮನಾಗಿ ಅವಳ ಸೇವೆ ಮಾಡುತ್ತೇವೆ? ಅವಳು ಅವತ್ತೇ ನಮ್ಮ ಹೊಲಸಿಗೆ ಹೇಸಿಗೆ ಪಟ್ಟುಕೊಂಡಿರುತ್ತಿದ್ದ್ರೆ ನಾವು ಈ ಮಟ್ಟಕ್ಕೆ ಬೆಳೆಯುತ್ತಿದ್ದ್ವೆ?

ಇನ್ನೂ “ವರ್ಣಮಯ” ಪುಸ್ತಕದಲ್ಲಿ ನನಗೆ ಹದಿನಾಲ್ಕು ಪ್ರಬಂಧಗಳಲ್ಲಿ ೧೩ ಪ್ರಬಂಧಗಳು ತುಂಬಾ ಇಷ್ಟವಾದವು. ಎಲ್ಲವೂ ಅದ್ಭುತ! ಒಂದಕ್ಕಿಂತ ಒಂದು ಮಿಗಿಲು ಚಂದ. ಆದರೆ “ಕುಂತಿ ಕರ್ಣರ ಪ್ರಸಂಗ” ನನಗೆ ಅಷ್ಟೊಂದು ತಲೆಗೆ ಹತ್ತಲಿಲ್ಲ. ಯಾಕೋ ಗೊತ್ತಿಲ್ಲ. ನೀವು ಹೆಸರಿಸಿರುವ ವೇದವ್ಯಾಸ, ಕುಮಾರವ್ಯಾಸ ಮತ್ತು ಭೈರಪ್ಪನವರ ಯಾವ ಪುಸ್ತಕವನ್ನು ನಾನು ಓದಿಲ್ಲ. ಬಹುಶಃ ಅದಕ್ಕೆ ನನಗೆ ತಲೆಗೆ ಅರ್ಥವಾಗಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಬೇಕು.

ಇಲ್ಲಿಯವರೆಗೂ ನಿಮ್ಮ ಅಮೂಲ್ಯ ಸಮಯವನ್ನು ನನ್ನ ಪತ್ರ ಓದಲು ವಿನಿಯೋಗಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಮತ್ತೊಂದು ಪುಸ್ತಕ ಓದಿದ ಮೇಲೆ ಮತ್ತೆ ಪತ್ರ ಬರೆಯುವೆ.

ಇಂತಿ ನಿಮ್ಮ ಓದುಗ
ಅಮಿತ ಪಾಟೀಲ, ಆಲಗೂರು
೧೭-೧೦-೨೦೧೫
————————————————————————–
————————————————————————–

ವಸುಧೇಂದ್ರ ಅವರ ಉತ್ತರ:
————————
ಪ್ರಿಯ ಅಮಿತ್,

ಇಂತಹ ಪತ್ರಗಳು ನನ್ನನ್ನು ಜೀವಂತವಾಗಿ ಇರುವಂತೆ ನೋಡಿಕೊಳ್ಳುತ್ತವೆ. ಅತ್ಯಂತ ಪ್ರಾಮಾಣಿಕವಾದ ನಿಮ್ಮ ಪತ್ರ ಬಹಳ ಸಂತೋಷವನ್ನು ತಂದಿದೆ.

ನಿಮ್ಮ ಬಾಲ್ಯ ಮತ್ತು ನನ್ನ ಬಾಲ್ಯಕ್ಕೆ ಸಾಕಷ್ಟು ಹೋಲಿಕೆಯಿದೆ. ಪಿಯುಸಿ ಸೇರಿದ ನಂತರ ನನ್ನ ಸಾಹಿತ್ಯದ ಸಹವಾಸವೇ ನಿಂತು ಹೋಗಿತ್ತು. ಅನಂತರ ಐಟಿ ಸೇರಿದ ಮೂರು ವರ್ಷಗಳ ನಂತರ ಚಿಗುರತೊಡಗಿತು.

ಚುಕ್ಕು ಬುಕ್ಕು ಬಗ್ಗೆ ನೀವು ಬರೆದ ಸಂಗತಿ ವಿಶೇಷವಾಗಿದೆ. ಆದ್ದರಿಂದ ಅದರ ರುವಾರಿಯಾದ ಅಪಾರನೊಡನೆ ನಿಮ್ಮ ಇಮೇಲ್ ಹಂಚಿಕೊಂಡಿದ್ದೇನೆ.

ನನ್ನ ಪುಸ್ತಕಗಳೆರಡು ನಿಮ್ಮ ಮೇಲೆ ಪ್ರಭಾವ ಬೀರಿರುವುದು ಸಂತಸದ ಸಂಗತಿ. ಉಳಿದ ಪುಸ್ತಕಗಳನ್ನು ಓದಿ, ಅಭಿಪ್ರಾಯ ತಿಳಿಸಿ.

ವಂದನೆಗಳು,

ವಸುಧೇಂದ್ರ

8 thoughts on “ವಸುಧೇಂದ್ರ ಅವರಿಗೆ ಒಂದು ಪತ್ರ

Leave a reply to Azad ಪ್ರತ್ಯುತ್ತರವನ್ನು ರದ್ದುಮಾಡಿ